Sunday 29 January 2012

"ಕರ್ವಾಲೊ" - ಒಬ್ಬ ವಿಜ್ಞಾನಿ ಕಾಲಜ್ಞಾನಿ ಆಗಿ ರೂಪುಗೊಳ್ಳುವ ಅಚ್ಚರಿಯ ಕಥೆ !




ಬಹಳ ವರುಷಗಳ ಹಿಂದೆ ನಮ್ಮ ತಂದೆಯವರು ನನ್ನೊಡನೆ ಯಾವುದೋ ವಿಚಾರವಾಗಿ ಚರ್ಚಿಸುತ್ತಾ " ನೋಡಯ್ಯ .. ತೇಜಸ್ವಿಯವರು ಕುವೆಂಪು ಅವರ ಮಗನಾದರೂ , ತಮ್ಮ ತಂದೆಯವರ ಪ್ರಭಾವವನ್ನು ಉಪಯೋಗಿಸದೇ , ಯಾರದೇ ಕೃಪಾಕಟಾಕ್ಷಗಳಿಗೆ ಪಾತ್ರರಾಗದೇ ತಮ್ಮದೇ ಆದ ಒಂದು ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುತ್ತಾರೆ . ಅವರು ಬರೆದಿರುವ ಪುಸ್ತಕಗಳನ್ನು  ಬಿಡುವಿದ್ದಾಗ ಓದು .... ಬಹಳ ಸೊಗಸಾಗಿರುತ್ತದೆ " ಎಂದು ಹೇಳಿದ್ದರು . ಹೀಗೆಯೇ ಬಹಳ ಮಂದಿ ಶ್ರೀಯುತ ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕಗಳನ್ನು ಓದಲು ನನಗೆ ಸಲಹೆ ನೀಡುತ್ತಲೇ ಬಂದಿದ್ದರು . 

ಮೂಲತಃ , ಶ್ರೀಯುತ ಗೊ.ರಾ.ಅಯ್ಯಂಗಾರ್ ರ ಲಲಿತ ಪ್ರಭಂಧಗಳನ್ನೂ,ಹಾಸ್ಯ-ಪುಸ್ತಕಗಳನ್ನು ಓದುತ್ತಿದ್ದ ನಾನು , "ಪ್ರಕೃತಿಯ ನಿಯಮವೇ ಬದಲಾವಣೆ" ಎಂಬ ಮಾತಿನಂತೆ , ಇತ್ತೀಚೆಗೆ ತೇಜಸ್ವಿ ಅವರ ಪುಸ್ತಗಳನ್ನು ಓದಲು ಶುರು ಮಾಡಿದೆ ! ಅದರಂತೆ ಅವರ "ಕರ್ವಾಲೊ" ಎಂಬ ಪುಸ್ತಕವನ್ನು ಓದಿ ಮುಗಿಸಿದೆ . ಓದಿ ಮುಗಿಸುತ್ತಿದಂತೆಯೇ ನನ್ನಲ್ಲಿ ಆದ ಒಂದು ಬಗೆಯ ರೋಮಾಂಚನ ಅನಿರ್ವಚನೀಯ ! ಹಾಗೆಯೇ ನನ್ನಲ್ಲಿ ಒಳ ಹೊಕ್ಕು ಕುಳಿತಿರುವ ಒಬ್ಬ ತಾತ್ವಿಕ ಚಿಂತಕ ನನ್ನಲ್ಲಿ ಹಲವಾರು ವಿಚಿತ್ರ-ವಿಶಿಷ್ಟ ಪ್ರಶ್ನೆಗಳನ್ನು ಕೇಳ ತೊಡಗಿದ . ನನ್ನಲ್ಲಿ ನೆಲೆಸಿರುವ ವಿಜ್ಞಾನದ ವಿದ್ಯಾರ್ಥಿ ಪ್ರಪಂಚದ ಸೃಷ್ಟಿ-ಸ್ಥಿತಿ-ಲಯದ ಬಗೆಗೆ ತರಹ-ವಿಚಿತ್ರ ಪ್ರಶ್ನೆಗಳನ್ನು ವ್ಯಕ್ತಪಡಿಸತೊಡಗಿದ ! 

ಹಾಗಿದ್ದರೆ , ಯಾರು ಈ 'ಕರ್ವಾಲೊ' ? ಏಕೆ ಈ ಪುಸ್ತಕ ಅಷ್ಟು ಪ್ರಶಂಸನೀಯ ?

ಕರ್ವಾಲೊ ಕಥೆ ಕಗ್ಗಾಡಿನ ಹಳ್ಳಿ ಕೊಂಪೆಯೊಂದರಲ್ಲಿ ನಡೆಯುವ ಘಟನೆ . ಹಳ್ಳಿಯ ಮಂದಣ್ಣ , ಪ್ರಭಾಕರ , ಎಂಗ್ಟ , ಕರಿಯಪ್ಪ ಮುಂತಾದವರೊಡನೆ ಬೆರೆತು ವಿಜ್ಞಾನಿ ಕರ್ವಾಲೊ ಕಾಲಜ್ಞಾನಿಯಾಗಿ ರೂಪುಗೊಳ್ಳುವ ಅಚ್ಚರಿಯ ಕಥೆ ! ಧರ್ಮ,ಧ್ಯಾನ,ತಪಸ್ಯೆಗಳಂತೆಯೇ ವಿಜ್ಞಾನವೂ ಸಾಕ್ಷಾತ್ಕಾರದ ದಾರಿ ಎಂದು ಪ್ರತಿಪಾದಿಸುವ ಈ ಕೃತಿ ಕನ್ನಡದ ಎಲ್ಲಾ ಕಾದಂಬರಿಗಳಿಗಿಂತ ಸಂಪೂರ್ಣ ಭಿನ್ನವಾದ ಕೃತಿ ! 

ಎಲ್ಲಾ ಕಥೆ-ಕಾದಂಬರಿಗಳಂತೆ ,ಲೇಖಕರು ತಮ್ಮ ಜವಾಬ್ದಾರಿಯನ್ನು  ಕೇವಲ "ನಾಟಕೀಯ ವಿವರಣೆ"ಗೆ ಸೀಮಿತಗೊಳಿಸದೆ , ಇಲ್ಲಿ ನಡೆಯುವ ಎಲ್ಲಾ ಘಟನೆಗಳಲ್ಲಿಯೂ , ಸಾಹಸ-ಪ್ರಸಂಗಗಳಲ್ಲಿಯೂ , ತತ್ವ-ಚಿಂತನೆಗಳಲ್ಲಿಯೂ ಸ್ವತಃ ಪಾತ್ರವನ್ನು ವಹಿಸಿ ತಮ್ಮ ಅನುಭವವನ್ನು ವಿವರಿಸಿದಂತಿದೆ . 

"ಕರ್ವಾಲೊ" ಕಥೆ ಮೂಡುಗೆರೆಯ 'ಜೇನು ಸೊಸೈಟಿ'ಯಲ್ಲಿ ಪ್ರಾರಂಭವಾಗುತ್ತದೆ .  ಮೊದಲಿಗೆ ಮಂದಣ್ಣ , ಲಕ್ಷ್ಮಣ , 'ಸಾಬಿ' ಪ್ಯಾರ , ಸ್ಪಾನಿಯಲ್ ನಾಯಿ 'ಕಿವಿ' ಮುಂತಾದವರನ್ನು  ಒಡಗೂಡಿ , ಲೇಖಕರು  ಜೇನು ಹುಳುಗಳಲ್ಲೇ ಇರುವ ಅನೇಕ ವಿಧವನ್ನು ಪರಿಚಯಿಸುತ್ತಾ , ಅವುಗಳ ಆಹಾರಾಭ್ಯಾಸದ  ವಿಚಾರವನ್ನೂ , ಗೂಡು ಕಟ್ಟುವ ವಿಧಾನವನ್ನೂ , ಜೇನು ಹಲ್ಲೆ ಕಟ್ಟುವ ಪರಿಯನ್ನೂ , ಅದರಿಂದ ಜೇನು ಹೊರತೆಗೆಯುವ ರೀತಿಯುನ್ನೂ ಅನೇಕ ದೃಷ್ಟಾಂತಗಳ ಮೂಲಕ ಸೊಗಸಾಗಿ ತಮ್ಮದೇ ಶೈಲಿಯಲ್ಲಿ  ವಿವರಿಸುತ್ತಾ ನಮ್ಮನ್ನು ಜೇನುಗಳ ವಿಸ್ಮಯಾಲೋಕಕ್ಕೆ ಕರೆದೊಯ್ಯುತ್ತಾರೆ ! ನಂತರ ಲೇಖಕರಿಗೆ , ಬಹಳ ಪ್ರಸಿದ್ಧ  ಸಸ್ಯವಿಜ್ಞಾನಿ ಮತ್ತು ಕೀಟ ಶಾಸ್ತ್ರಜ್ಞರಾದ 'ಕರ್ವಾಲೊ' ಅವರ ಪರಿಚಯವಾಗುತ್ತದೆ . ಆ ವೇಳೆಗಾಗಲೇ ಕರ್ವಾಲೊ , 'ಹಳ್ಳಿ ಗಮಾರ' ಮಂದಣ್ಣ ತೋರಿಸಿದ  "Glow Worm " ಎಂಬ ವಿಚಿತ್ರ ಹುಳುವಿನ ಅಧ್ಯಯನದಲ್ಲಿ ತೊಡಗಿರುತ್ತಾರೆ .

" ಈ ಹುಳುವನ್ನು ಇಷ್ಟರವರೆಗೆ ಯಾರೂ ಕಂಡಿರಲಿಲ್ಲ . ಭಾರತದಿಂದ ಇದೆ ಮೊದಲ ಬಾರಿಗೆ ರಿಪೋರ್ಟ್ ಆಗ್ತಿರೋದು . ಈ ಹುಳುವಿನ ಬಾಲದಲ್ಲಿ ಎರಡು ದೀಪಗಳಿವೆ .... ನೋಡಿದ್ರಾ ...  ಅದಕ್ಕೇನಾದರೂ ಅಪಾಯದ ಸೂಚನೆ ಬಂದರೆ ಸಾಕು ವೈರಿಗಳನ್ನು ಹೆದರಿಸಿ ಓಡಿಸಲು ಅದರ ಬಾಲದ ಕಡೆಯಿಂದ ನೀಲಿಯ ಬೆಳಕನ್ನು ಚೆಲ್ಲುವ ಆ ಎರಡು ದೀಪಗಳು ಹತ್ತಿಕೊಳ್ಳುತ್ತದೆ "  - ಇವೆ ಮೊದಲಾದ "Glow Worm"ನ ವರ್ಣನೆಯನ್ನು  ಕರ್ವಾಲೊ ಅವರಿಂದ ಕೇಳುತ್ತಲೇ ಲೇಖಕರು ( ಓದುಗರೂ ) ಮೂಕವಿಸ್ಮಿತರಾಗುತ್ತಾರೆ ! 

ಹೀಗೆ 'ಕರ್ವಾಲೊ'ವಿನ ಕಥೆ ನಮ್ಮ ಜ್ಞಾನ ಭಂಡಾರವನ್ನು ವೃಧಿಸುತ್ತಾ ಸಾಗುತ್ತಿರಬೇಕಾದರೆ.....  ಒಮ್ಮೆ ಕರ್ವಾಲೊ ಸಾಹೇಬರು ಲೇಖಕರಿಗೆ  , ಮಂದಣ್ಣನು " ಹಾರುವ ಓತಿ " ( Flying Lizard ) ಒಂದನ್ನು ಕಾಡಿನಲ್ಲಿ ನೋಡಿದ್ದಾನೆಂದೂ ,  ಇದು ಸ್ಥೂಲವಾಗಿ ಮೂರು ಮಿಲಿಯನ್ ವರುಷಗಳಿಗಿಂತ ಹಿಂದಿನದು ಮತ್ತು ಸರ್ವರೂ ಅದು ನಿಃಶೇಷವಾಗಿದೆಂದು ನಂಬಿದ್ದಾರೆ  ಮತ್ತು ಇದರ ಒಂದು ಮಿಂಚು ನೋಟ ಸಿಕ್ಕರೂ ಸಾಕೆಂದು ಜಗತ್ತಿನಾದ್ಯಂತ ವಿಜ್ಞಾನಿಗಳು ತಮ್ಮ ಕಾಲ,ಜೀವನ,ಹಣ ಎಲವನ್ನೂ ಮುಡುಪಾಗಿಟ್ಟುಕೊಂಡು ಹಂಬಲಿಸುತ್ತಿದ್ದಾರೆಂದೂ ತಿಳಿಸುತ್ತಾರೆ . ಇಂತಹ , ಇಡಿಯ ಜಗತ್ತೇ ಬೆಚ್ಚಿಬೀಳುವಂಥಹ ಸಮಾಚಾರವನ್ನು ಹೊರ ಪ್ರಪಂಚಕ್ಕೆ ತಿಳಿಸುವ ಮೊದಲು ತಾವೊಮ್ಮೆ ಸ್ವತಃ  ನೋಡಿಬರಬೇಕೆಂದು ಕಾಡಿಗೆ ಹೊರಡುವ ತಯಾರಿಯಲ್ಲಿ ಇದ್ದೇವೆ , ನೀವು ಕೂಡ ಬನ್ನಿ ಎಂದು ಲೇಖಕರನ್ನು ಆಹ್ವಾನಿಸುತ್ತಾರೆ !

ಅದರಂತೆ ಕರ್ವಾಲೊ , ಲೇಖಕರು , ಮಂದಣ್ಣ , 'ಫೋಟೊಗ್ರಾಫರ್ ' ಪ್ರಭಾಕರ , 'ಬಿರಿಯಾನಿ' ಕರಿಯಪ್ಪ , ಸ್ಪಾನಿಯಲ್ ನಾಯಿ 'ಕಿವಿ' , ದಾರಿಯಲ್ಲಿ ಸಿಗುವ ಎಂಗ್ಟ - ಮಲೆನಾಡಿನ ದಟ್ಟವಾದ ಕಾಡಿನಲ್ಲಿ ಬಂದೊದಗುವ  ಅಡೆ ತಡೆಗಳನ್ನೆಲ್ಲಾ ಲೆಕ್ಕಿಸದೇ , ಆ ಮೂರು ಮಿಲಿಯನ್ ವರುಷಗಳಿಗಿಂತ ಹಿಂದಿನ 'ಹಾರುವ ಓತಿಯ'ನ್ನು  ಅರಸುತ್ತ ಸಾಗುವುದೇ ಈ ಕಥೆಯ ಜೀವಾಳ  ! 

ಕಾಡಿನಲ್ಲಿ ಅವರ ನಡುವೆ ನಡೆಯುವ ಚರ್ಚೆ-ಸಂಭಾಷಣೆಗಳು , ತಾತ್ವಿಕ-ಚಿಂತನೆಗಳು , ಅಲ್ಲಿ ನಡೆಯುವ ವೈಜ್ಞಾನಿಕ ಆವಿಷ್ಕಾರ ಈ ಕೃತಿಯ ಮತ್ತು ರಚಿಸಿದ ಲೇಖಕರ ಪ್ರಭುದ್ಧತೆಗೆ ಕೈಗನ್ನಡಿಯಂತಿದೆ !

ಅವರು ತಮ್ಮ ಸಾಹಸ-ಕಾರ್ಯದಲ್ಲಿ ಯಶಸ್ವಿಯಾದರೇ ? ಅರ್ಥಾತ್, ಅವರು ಹಾರುವ-ಓತಿಯನ್ನು ಹಿಡಿಯಲು ಮಾಡುವ ಪ್ರಯತ್ನದಲ್ಲಿ ಜಯಗಳಿಸಿದರೇ ? ಅಥವಾ ಅವರ ಶ್ರಮ ವ್ಯರ್ಥವಾಯಿತೇ  ? - ಎಂಬುದೆಲ್ಲಾ ಕಡೇಗೆ ಅಪ್ರಸ್ತುತವಾಗುತ್ತದೆ  !

ಏಕೆಂದರೆ ಲೇಖಕರು "ಹಾರುವ ಓತಿ"ಯ ಮಹತ್ವವನ್ನು ಕೇವಲ ಸಾಹಸೀತನಕ್ಕೆ ಸೀಮಿತಗೊಳಿಸಿರುವುದಿಲ್ಲ ! ಬದಲಿಗೆ ಅದು ಜೀವ-ವಿಕಾಸದಲ್ಲಿ,ಕಾಲದ ಅನಂತತೆಯಲ್ಲಿ , ಸತ್ಯದ ಅನ್ವೇಷಣೆಯಲ್ಲಿರುವ ಪ್ರತಿಯೊಬ್ಬರಲ್ಲಿಯೂ ಆಲೋಚನೆ,ಕನಸುಗಳನ್ನು ಪ್ರಚೋದಿಸುವ ಸಾಂಕೇತಿಕ ರೂಪವಾಗಿ ಚಿತ್ರಿಸಿದ್ದಾರೆ ಎಂಬುದು ನನ್ನ ಭಾವನೆ ! ಆ ನಿಟ್ಟಿನಲ್ಲಿ ಲೇಖಕರು ಬಹು-ಪಾಲು ಯಶಸ್ವಿಯಾಗಿ ,ನಮಲ್ಲಿ , ಸನ್ಮಾನ್ಯ ಡಿ.ವಿ.ಜಿ ಅವರ ಮಾತಿನಂತೆ 

ಏನು ಜೀವನದರ್ಥ? ಏನು ಪ್ರಪಂಚಾರ್ಥ? ।
ಏನು ಜೀವಪ್ರಪಂಚಗಳ ಸಂಬಂಧ? ॥
ಕಾಣದಿಲ್ಲಿ‍ರ್ಪುದೇನಾನುಮುಂಟೆ? ಅದೇನು? ।
ಜ್ಞಾನಪ್ರಮಾಣವೇಂ? – ಮಂಕುತಿಮ್ಮ 


ಜೀವನ ಎಂದರೇನು ? ಪ್ರಪಂಚ ಎಂದರೇನು ?
ಈ ಜೀವ-ಪ್ರಪಂಚಗಳ ಸಂಬಂಧವಾದರೂ ಎಂತಹುದು ?
ನಾವು ಕಾಣದೇ ಇರುವುದಾವುದಾದರೂ ಉಂಟೇ ? ಹಾಗೆ ಇದ್ದರೇ , ಯಾವುದದು ?
ಕೇವಲ ಜೀವಿಯ ಜ್ಞಾನ ಅದರ ಅಸ್ತಿತ್ವ  - ಅದರ ಅಸ್ತಿತ್ವ ಇಲ್ಲದಿರುವುದಕ್ಕೆ ಸಾಕ್ಷಿಯೇ ? - ಮಂಕುತಿಮ್ಮ 

- ಇವೇ ಮೊದಲಾದ ತಾರ್ಕಿಕ-ತಾತ್ವಿಕ ಚಿಂತನ-ಮಂಥನಗಳಿಗೆ ನಾಂದಿ ಹಾಡುತ್ತಾರೆ ! 

ಪಠ್ಯಕ್ಕೇ ಸೀಮಿತಗೊಳಿಸಿ, ಪಠ್ಯ-ಪುಸ್ತಕದ ಆಚೆಗೆ ಯೊಚನೆ ಮಾಡಲೂ ಪ್ರಚೊದಿಸದ  ಈಗಿನ ಶೈಕ್ಷಣಿಕ ಪದ್ಧತಿ ಒಂದೆಡೆಯಾದರೆ , "ಕರ್ವಾಲೋ" ಅಂತಹ ಸೃಜನಾತ್ಮಕ , ಚಿಂತನ-ಮಂಥನಗಳಿಗೆ ಸ್ಪೂರ್ತಿಯಾಗಿರುವ ಕೃತಿ ಮತ್ತೊಂದೆಡೆ !

ಇಂತಹ ಕೃತಿ ಕನ್ನಡದಲ್ಲಿ ರಚಿತವಾಗಿದೆ ಎಂಬುದು ಇನ್ನೊಂದು ಹೆಮ್ಮೆಯ ವಿಷಯ. ಇತ್ತೀಚೆಗೆ ನಾನು , ನನ್ನ "ಸಂಸ್ಕೃತ ಪ್ರೇಮಿ" ತಮ್ಮನೊಡನೆ ಯಾವುದೋ ವಿಷಯವಾಗಿ ಚರ್ಚಿಸುತ್ತಿದ್ದಾಗ ... ಆತ " ಅಯ್ಯೋ ! ನಿಮ್ಮ ಕನ್ನಡ ಸಾಹಿತ್ಯ ಬಿಡಯ್ಯ ...  'ABCD  ನಾ .. ಆಲೂ  ಗೆಡ್ಡೆ  ನಾ .. ಗೋಡೆ  ಹಲ್ಲಿ  ನಾ .. ಯಾವನಿಗ್  ಗೊತ್ತು ? ' ಅಂತ ಸಿನಿಮಾ ಹಾಡು ಬರ್ಯೋದಕ್ಕೆ ಸೀಮಿತ  ! " ಎಂದು ಗೇಲಿ ಮಾಡಿದ . ದುರದೃಷ್ಟಕರ ಸಂಗತಿ ಎಂದರೆ ಈತನ ಹಾಗೆ ಹಲವಾರು ಮಂದಿ ಕನ್ನಡ ಸಾಹಿತ್ಯದ ಅರಿವೇ ಇಲ್ಲದೇ , ಈಗಿನ "ಅರ್ಥ-ರಹಿತ" ಸಿನಿಮಾ ಸಾಹಿತ್ಯವನ್ನು ಅಸ್ತ್ರವಾಗಿಸಿಕೊಂಡು , " ಕನ್ನಡದಲ್ಲಿ ಏನಿದೆ ?" " ಕನ್ನಡ-ಸಾಹಿತ್ಯಕ್ಕೆ ಬೆಲೆ ಏನಿದೆ ? " ಎಂದು ಟೀಕಿಸುತ್ತಿರುವವರನ್ನು ನಾವು ನೋಡಬಹುದು . ಅಂತಹವರು "ಕರ್ವಾಲೊ" ಪುಸ್ತಕವನ್ನು ಒಮ್ಮೆ ಅಧ್ಯಯನ ಮಾಡಿದ ನಂತರ ಆ ಮಾತುಗಳನ್ನು ಖಂಡಿತ ಹೇಳಲಾರರು ಎಂಬುದು ನನ್ನ ನಂಬುಗೆ .

ಒಟ್ಟಿನಲ್ಲಿ , ಶ್ರೀಯುತ ತೇಜಸ್ವಿ ಅವರ "ಕರ್ವಾಲೊ" ಸರ್ವಕಾಲಕ್ಕೂ  ಅನ್ವಯಿಸುವಂತಹ ಮತ್ತು ಸರ್ವರೂ ಓದಿ ತಿಳಿಯಬೇಕಾದಂತಹ ಅಭೂತಪೂರ್ವ ಕೃತಿ . ಇಂತಹ ಸೃಜನಾತ್ಮಕ ಕೃತಿಗಳು ಕನ್ನಡದಲ್ಲಿ ಇನ್ನು ಹೆಚ್ಚು-ಹೆಚ್ಚು ಬರುವಂತಾಗಲಿ !

ನಮಸ್ಕಾರಗಳೊಂದಿಗೆ ...

2 comments:

  1. ಕುವೆಂಪು ಮತ್ತು ತೇಜಸ್ವಿ ಕನ್ನಡದ ಎರಡು ಪರಿಪೂರ್ಣ ಬಿಂದುಗಳು.

    ಕಾರ್ವಲೋ, ಚಿದಂಬರ ರಹಸ್ಯ, ಪರಿಸರ ಕಥೆ ಹೀಗೆ ಓದುತ್ತ ಹೋದಂತೆಲ್ಲ ನಮಗೆ ತೇಜಸ್ವಿಯವರ ಅಗಾಧತೆ ಅರಿವಿಗೆ ಬರುತ್ತದೆ. ತೇಜಸ್ವಿ ಒಬ್ಬ ಕವಿಯೂ ಅಗಿದ್ದರು ಅವರು ಬಹಳ ಕಡಿಮೆ ಸಂಖ್ಯೆಯಲ್ಲಿ ಕವನಗಳನ್ನು ಬರೆದಿದ್ದಾರೆ.

    ಇಂತಹ ಉತ್ತಮ ಬರಹ ನೀಡಿದ್ದಕ್ಕಾಗಿ ಧನ್ಯವಾದಗಳು.

    ನನ್ನ ಬ್ಲಾಗಿಗೂ ಸ್ವಾಗತ.

    ReplyDelete
    Replies
    1. ಧನ್ಯವಾದಗಳು ಬದ್ರಿನಾಥ್ ಅವರಿಗೆ !

      Delete